Menu

ಇಬ್ರಿಯರಿಗೆ 3

IRV

1 ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ. 2 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ. 3 ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. 4 ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ. 5 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಸಾಕ್ಷಿಕೊಟ್ಟಿದ್ದಾನೇ. 6 ಆದರೆ ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ. 7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, " ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ, 8 ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ. 9 ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ, ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು. 10 ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು, ‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ, ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ. 11 ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.’" 12 ಸಹೋದರರೇ, ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ. 13 ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. 14 ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ. 15 " ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ, ಪೂರ್ವಿಕರು ಮೊಂಡುತನದಿಂದ ಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ." 16 ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ? 17 ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು. 18 ನನ್ನ ವಿಶ್ರಾಂತಿಯಲ್ಲಿ ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ? 19 ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.

Everything we make is available for free because of a generous community of supporters.

Donate